ತಿಳಿ ಹಾಸ್ಯದ ಮೂಲಕ ಸಂವಹನ ಮಾಡುತ್ತಿದ್ದ ವಝೆಯವರ ಸಜ್ಜನಿಕೆ, ಅನುಭವ ಹಂಚಿಕೆಯ ಮನೋಭಾವ, ಪರಿಸರ ಕಾಳಜಿ ಮತ್ತು ಸೇನಾನಿಯಾದ್ದರಿಂದ ಇರಬೇಕು, ಮಾತು - ಕೃತಿಯಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಹೊಂದಿದ್ದ ವಝೆಯವರು ಇನ್ನು ನೆನಪು ಮಾತ್ರ.
- ಕಾರನ್ತ
ತಿಳಿ ಹಾಸ್ಯದ ಮೂಲಕ ಸಂವಹನ ಮಾಡುತ್ತಿದ್ದ ವಝೆಯವರ ಸಜ್ಜನಿಕೆ, ಅನುಭವ ಹಂಚಿಕೆಯ ಮನೋಭಾವ, ಪರಿಸರ ಕಾಳಜಿ ಮತ್ತು ಸೇನಾನಿಯಾದ್ದರಿಂದ ಇರಬೇಕು, ಮಾತು - ಕೃತಿಯಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಹೊಂದಿದ್ದ ವಝೆಯವರು ಇನ್ನು ನೆನಪು ಮಾತ್ರ.
“ಕೃಷಿ ಅಂದರೆ ಕ್ರೀಡೆ. ಸೋಲು ಗೆಲುವು ಸಹಜ. ಸೋಲುತ್ತೇವೆಂದು ಆಡದೆ ಇರುವುದಕ್ಕೆ ಆಗುತ್ತದಾ? ಆಡ್ತಾ ಆಡ್ತಾ ಗೆಲುವು ಸಿಗುತ್ತದೆ.” ಇದು ಮುಂಡಾಜೆಯ ಗಜಾನನ ವಝೆಯವರ ಮಾತು. ಇದು ಅವರ ಅನುಭವ ಕೂಡಾ.
ವಝೆಯವರು ನಿವೃತ್ತ ಲೆಫ್ಟ್ಟಿನೆಂಟ್. ವಿಶ್ರಾಂತ ಅಧ್ಯಾಪಕ. ಸಾಮಾಜಿಕ ಕಾರ್ಯಕರ್ತ, ಲೇಖಕ. ನಿರಂತರ ಸಕ್ರಿಯ. ಊರವರು ಮೆಚ್ಚಿಕೊಂಡ, ಊರಿಗೇ ಉಪಕಾರವನ್ನು ಮಾಡುವ ಮನಃಸ್ಥಿತಿಯುಳ್ಳ ವಝೆಯವರು 2025 ಎಪ್ರಿಲ್ 30ರಂದು (70) ನಿಧನರಾದರು. ಅಪ ಬಳಗದ ಕಂಬನಿ.
ಹಿಂದೊಮ್ಮೆ ಇಸ್ರೇಲಿಗೆ ಪ್ರವಾಸ ಹೋಗಿದ್ದರು. ಪ್ರವಾಸದ ಗುಂಗಿನಲ್ಲಿದ್ದರೂ ಅವರೊಳಗಿನ ಪತ್ರಕರ್ತ ಎಚ್ಚರ. ಪರಿಣಾಮ, ಅಡಿಕೆ ಪತ್ರಿಕೆಯಲ್ಲಿ ಆರೇಳು ಕಂತುಗಳಲ್ಲಿ ಅಂಕಣ ಬರಹದ ಪ್ರಕಟಣೆ. ಗೂಬೆ ಮರಿಗಳ ರಫ್ತು, ಕೆಲಸ ಹಂಚಿಕೊಳ್ಳುವ ಕಿಬ್ಬುಟ್ಜ್ಗಳು.. ಬರಹಗಳು ಕುತೂಹಲ ಮೂಡಿಸಿದ್ದುವು.
ಸ್ಥಳೀಯ ಶ್ರಮ ಉಳಿಸುವ ಉಪಕರಣಗಳನ್ನು ಅಪದಲ್ಲಿ ಪರಿಚಯಿಸಿದ್ದರು. ಸತ್ವವಿಲ್ಲದೆ ಸೊರಗಿರುವ ಮಣ್ಣನ್ನು ಫಲವತ್ತಾಗಿ ಮಾಡುವ, ಮಣ್ಣಿನ ಆರೋಗ್ಯದ ಕಾವಲುಗಾರ ‘ಬಯೋಚಾರ್’ ತಯಾರಿಸುವ ಬಗೆಯನ್ನು ಅನುಭವದಿಂದ ಬರೆದಿದ್ದರು. ಮಾಡುವ ವಿಧಾನವನ್ನೂ ತಿಳಿಸಿದ್ದರು. (ಅಪ, ಜೂನ್ 2016) ಲೇಖನದಿಂದ ಸ್ಫೂರ್ತಿ ಪಡೆದ ಕೆಲವರು ಬಯೋಚಾರ್ ತಯಾರಿಸಿದ್ದರು.
ತಮ್ಮೂರಿನ ನೀರಿನ ಸಂಕಟಕ್ಕೆ ತಾವೇ ಪರಿಹಾರ ಕಂಡುಕೊಳ್ಳುವ ಅಭಿಯಾನವು ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸಿತ್ತು. ಹಳ್ಳಿಯಲ್ಲಿ ನೀರಿನ ಅರಿವನ್ನು ಬಿತ್ತುವಲ್ಲಿ ವಝೆಯವರ ಕಾರ್ಯ ಗುರುತರ.
ವಾಟ್ಸಾಪ್ ಗುಂಪುಗಳ ಮೂಲಕ ಸಂವಹನ ಮಾಡಿ ನೀರಿನ ಯೋಧರನ್ನು ರೂಪಿಸಿದ್ದರು. “ನನ್ನೂರಿಗೆ ಏನನ್ನಾದರೂ ಮಾಡಬೇಕು ತನ್ನ ಮನಸ್ಸಿನಲ್ಲಿರುವ ನೀರಿನ ಸಾಕ್ಷರತೆಯನ್ನು ಅರಿಯುವ, ಒಪ್ಪುವ, ಹಲವಾರು ಮಂದಿಯನ್ನು ಒಗ್ಗೂಡಿಸುವ ಕನಸು ಭಾಗಶಃ ಈಡೇರಿದೆ” ಎಂದಿದ್ದರು.
ತುಮಕೂರು ಮಾರುಕಟ್ಟೆಯು ಹುಣಸೆ ಹಣ್ಣಿಗೆ ಖ್ಯಾತಿ. ಅಲ್ಲಿಂದ ಹುಣಸೆಯನ್ನು ಖರೀದಿ ಮಾಡಿ, ತಮ್ಮೂರಿನ ಸಹಕಾರಿ ಸಂಘದ ಮೂಲಕ ಮಾರಾಟ ಮಾಡುವ ಯತ್ನ ಮಾಡಿದ್ದರು.
“ವಝೆಯವರ ಲವಲವಿಕೆ, ಗಂಡ - ಹೆಂಡತಿ ಜತೆಯಾಗಿ ನಿರ್ವಹಿಸುವ ತೋಟದ ಕೆಲಸ. ಬಯೋಚಾರ್ ತಯಾರಿ, ಕಟ್ಟ.. ಹೀಗೆ ಅನೇಕ ವಿಚಾರಗಳಲ್ಲಿ ಇತರರಿಗೆ ಸ್ಫೂರ್ತಿ. ದೇಹದ ವಯಸ್ಸು ಏರುವುದರ ಜತೆಗೆ ಮನಸ್ಸು ಮತ್ತಷ್ಟು ಯುವಕನಂತೆ ಸಂವಹನ ಅವರ ವೈಶಿಷ್ಟ್ಯ.” ವಝೆಯವರನ್ನು ಹತ್ತಿರದಿಂದ ಬಲ್ಲ ಪಶುವೈದ್ಯ ಡಾ.ಮನೋಹರ ಉಪಾಧ್ಯರು ಜಾಲತಾಣದಲ್ಲಿ ಬರೆದಿದ್ದರು.
ಗಜಾನನ ವಝೆಯವರ ಸಾಮಾಜಿಕ ಸೇವೆಗೆ ದಶಮುಖ. ಮುಂಡಾಜೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಾನಾ ಜಾತಿಯ ಸಸ್ಯ, ಮರಗಳನ್ನು ಗುರುತಿಸಿ ಇದರ ಬಗ್ಗೆ ಸಮಗ್ರ ಮಾಹಿತಿ, ವಿವರಗಳನ್ನು ಸಂಗ್ರಹಿಸಿ ಸ್ಥಳೀಯಾಡಳಿತಕ್ಕೆ ಸಲ್ಲಿಸಿದ್ದರು. ಮುಂಡಾಜೆ ಸೊಸೈಟಿಯಲ್ಲಿ ನಿರ್ದೇಶಕರಾಗಿದ್ದರು. ಊರಿಗೆ, ನಿಕಟವರ್ತಿಗಳಿಗೆ ಅವರು ನೆಚ್ಚಿನ ದೊಡ್ಡಣ್ಣ ಆಗಿದ್ದರು.
ತಿಳಿ ಹಾಸ್ಯದ ಮೂಲಕ ಸಂವಹನ ಮಾಡುತ್ತಿದ್ದ ವಝೆಯವರ ಸಜ್ಜನಿಕೆ, ಅನುಭವ ಹಂಚಿಕೆಯ ಮನೋಭಾವ, ಪರಿಸರ ಕಾಳಜಿ ಮತ್ತು ಸೇನಾನಿಯಾದ್ದರಿಂದ ಇರಬೇಕು, ಮಾತು - ಕೃತಿಯಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಹೊಂದಿದ್ದ ವಝೆಯವರು ಇನ್ನು ನೆನಪು ಮಾತ್ರ.