ಸುರಗಿ ಹೂ, ಹೂ ಮಾಲೆ, ಹೂವರಳಿಸಿ ನಿಂತ ಅತ್ಯಾಕರ್ಷಕ ಸುರಗಿ ಮರಗಳನ್ನು ಕೇಂದ್ರವಾಗಿಸಿ ದೂರದ ಮಂದಿಗೆ ಏನೆಲ್ಲಾ ತೋರಿಸಬಹುದು! ಈ ಹಳ್ಳಿಗಳು ಉತ್ಸವದ ಮೂಲಕ ಒಂದಷ್ಟು ಆದಾಯ, ಅಭಿಮಾನ ಗಳಿಸಿಕೊಳ್ಳಲೂಬಹುದು..
l ಟೀಮ್ ಅಪ
ಸೂರುಗುಪ್ಪೆಯಲ್ಲಿ ಮುಂದಿನ ಋತುವಿನಲ್ಲಿ ಸುರಗಿ ಉತ್ಸವ ನಡೆಸಬೇಕು. ಇದು ಸಾಗರದ ಕೃಷಿಕ, ಸಾಮಾಜಿಕ ಕಾರ್ಯಕರ್ತ ದೇವೇಂದ್ರ ಬೆಳೆಯೂರರ ಕನಸು.
ಕೋವಿಡ್ ಬರುವುದಕ್ಕೆ ಮುನ್ನ ಈ ಉತ್ಸವ ನಡೆಸುವ ಯೋಚನೆ ಬಲಿತಿತ್ತು. ಆದರೆ ಆಗ ಕೈಗೂಡಲಿಲ್ಲ. ಈಗ ವೆಂಗುರ್ಲದ ಸುರಗಿಯ ರೋಚಕ ಕತೆ ಕೇಳಿ ಉತ್ಸವದ ಕನಸು ಮತ್ತೆ ಚಿಗುರಿದೆ.
ಸುರಗಿ ಹೂವಿನ ಸೀಸನ್ ಕೇವಲ ಒಂದೇ ತಿಂಗಳು. ಈ ನಡುವೆ ಒಂದು ದಿನ ಸರಳ, ಆದರೆ, ಸುರಗಿ ಸಂಪತ್ತಿರುವ ಊರುಗಳ ಮಂದಿ ಈ ಬಗ್ಗೆ ಅಭಿಮಾನ ಹೊಂದುವ ರೀತಿಯಲ್ಲಿ ಇದನ್ನು ಹಮ್ಮಿಕೊಳ್ಳಬೇಕು ಎನ್ನುವುದು ದೇವೇಂದ್ರರ ಆಶಯ. ಇದಕ್ಕಾಗಿ ಇವರು ಪಂಚಾಯತ್ ಸದಸ್ಯರು, ಊರವರು, ಗೆಳೆಯರ ಜತೆ ಮಂತ್ರಾಲೋಚÀನೆಗೆ ತೊಡಗಿದ್ದಾರೆ. ಅರಣ್ಯ ಇಲಾಖೆಯನ್ನು ಸಂಪರ್ಕಿಸುವ ಉದ್ದೇಶ ಹೊಂದಿದ್ದಾರೆ.
ಉತ್ಸವಕ್ಕಾಗಿಯೇ ಸಾಗರದ ಕಸಿ ನಿಪುಣ ನಟೇಶ್ ಕೋಣನಕಟ್ಟೆ ಸುರಗಿಯ ಕಸಿ ಗಿಡ ತಯಾರಿಯ ಯತ್ನ ಆರಂಭಿಸಿದ್ದಾರೆ. ಆಸಕ್ತ ಮಂದಿಗೆ ಸುರಗಿ ದಂಡೆ ಹೆಣೆಯುವ ಕೌಶಲದ ಪ್ರಾತ್ಯಕ್ಷಿಕೆ, ಮನೆಯಂಗಳದಲ್ಲಿ ನೆಟ್ಟು ಬೆಳೆಸುವವರಿಗಾಗಿ ಕಸಿ ಸುರಗಿ ಗಿಡ ಪೂರೈಕೆ, ಸುರಗಿ ಮತ್ತು ಜೇನಿನ ಸಂಬಂಧದ ಬಗ್ಗೆ ಮಾಹಿತಿ, ಆಧುನಿಕ ತಂತ್ರಜ್ಞಾನ ಬಳಸಿ ಸುರಗಿ ಹೂವನ್ನು ಸಂರಕ್ಷಿಸಿ, ಕರಕುಶಲ ಉತ್ಪನ್ನ ತಯಾರಿಸಿ ಮಾರುವ ಬಗ್ಗೆ ಸುರಗಿ ಊರವರಿಗೆ ತರಬೇತಿ - ಹೀಗೆ ಒಂದಷ್ಟು ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಯುತ್ತಿದೆ.
ಮರ ಏರಿ ಸುರಗಿ ಹೂ ಕೊಯ್ಯುವುದ ರಿಂದಾರಂಭಿಸಿ ಅದನ್ನು ಮಾಲೆ ಕಟ್ಟುವ ವರೆಗಿನ ಕೆಲಸ ಶ್ರಮದಾಯಕ. ಹಿಂದೆ ಮನೆ ಮಂದಿಯೆಲ್ಲಾ ಸೇರಿ ಇದನ್ನು ನಿಭಾಯಿಸುತ್ತಿದ್ದರು. ಈ ಹೂವಿನ ತೊಟ್ಟು ಗಟ್ಟಿಯಿಲ್ಲ. ಹಾಗಾಗಿ ಇದರ ‘ರೆಕ್ಕೆ’ ಮಡಚಿ ನೂಲಿನಲ್ಲಿ ಸುರಿಯಬೇಕು. ಇದು ತುಂಬ ಸೂಕ್ಷ್ಮ ಮತ್ತು ಸಮಯ ಬೇಡುವ ಕೆಲಸ. ಹೊಸ ಪೀಳಿಗೆಯವರು ಇದನ್ನು ಕಲಿತಿಲ್ಲ.
ಸುರಗಿ ದಂಡೆ (ಮಾಲೆ) ಹೆಣೆಯುವುದು ಕೂಡಾ ಹೊಸಬರಿಗೆ, ಹಳ್ಳಿಯ ಆಸಕ್ತಿ ಇರುವ ಪಟ್ಟಣದವರಿಗೆ ಕುತೂಹಲಕಾರಿ ವಿಚಾರ. ಸುರಗಿಯ ಅದ್ಭುತ ಪರಿಮಳವನ್ನು ಬದುಕಿನಲ್ಲಿ ಎಂದಾದರೂ ಅನುಭವಿಸಿದವರಿಗೆ ಅದು ನೊಸ್ಟಾಲ್ಜಿಯಾ (ಸವಿನೆನಪು).
ಈ ಎಲ್ಲಾ ಅಂಶಗಳಿಂದಾಗಿ ‘ಸುರಗಿ ಟೂರಿಸಂ’ಗೆ ಒಳ್ಳೆ ಅವಕಾಶವಿದೆ. ಮಹಾರಾಷ್ಟ್ರದ ವೆಂಗುರ್ಲದ ಎರಡು ಹೋಮ್ ಸ್ಟೇಗಳಲ್ಲಿ ಈ ಪ್ರಯತ್ನಗಳು ಆಗುತ್ತಿವೆ. ಆದರೆ ನಾಮಮಾತ್ರಕ್ಕೆ ಮಾತ್ರ.
ಸುರಗಿ ಸೀಸನಿನ ಒಂದು ತಿಂಗಳ ಕಾಲ ಪರವೂರ ಆಸಕ್ತರಿಗೆ ಈ ಚೇತೋಹಾರಿ ಹೂವಿನ ಮರಗಳನ್ನು ತೋರಿಸಬಹುದು. ಜತೆಗೆ ಜೇನಿನ ಝೇಂಕಾರವನ್ನು, ಸುರಗಿ ದಂಡೆ ಕಟ್ಟುವ ಕ್ರಮ ತಿಳಿಸಿ ಈ ಊರುಗಳ ಸಾಂಪ್ರದಾಯಿಕ ಆಹಾರ ಒದಗಿಸಬಹುದು. ಈ ವನ್ಯವೃಕ್ಷ ಹಿಂದೆ ಹೇಗೆ ಬದುಕು ಕಟ್ಟಿ ಕೊಡುತ್ತಿತ್ತು ಎನ್ನುವುದನ್ನು ಆ ಊರ ಹಿರಿಯರ ಬಾಯಿಯಿಂದ ಕೇಳಿಸಬಹುದು. ಕುಂಡದಲ್ಲಿ ಕಸಿ ಸುರಗಿ ಬೆಳೆಸಿಟ್ಟು ಸೆಲ್ಫಿ ಪಾಯಿಂಟ್ ಆಗಿ ಜನಪ್ರಿಯಗೊಳಿಸಬಹುದು. ಸಿಂಧುದುರ್ಗದ ಸುರಗಿ ಗ್ರಾಮಗಳ ಕೋಟಿಕೊಟಿ ಸಂಪಾದನೆಯ ವಿಡಿಯೋ ತೋರಿಸಬಹುದು.
“ಉತ್ಸವದ ಮೂಲಕ ಸುರಗಿ ಮರಗಳ ಮಹತ್ವ ಸಾರಲು, ಸುರಗಿಯಾಧಾರಿತ ಗ್ರಾಮಗಳ ಅಸ್ಮಿತೆ ಉಳಿಸಲು ಸಾಧ್ಯವಾಗಬಹುದು. ವ್ಯಾವಹಾರಿಕ ಲಾಭವೂ ಇದೆ ಎಂದು ಗೊತ್ತಾದರೆ ಹಳ್ಳಿಗರು ಈ ಮರಗಳನ್ನು ಕಡಿಯದೆ ಉಳಿಸುವ ಸಾಧ್ಯತೆ ಇದೆ” ದೇವೇಂದ್ರ ಬೆಳೆಯೂರು ಹಾರೈಸುತ್ತಾರೆ.
ದೇವೇಂದ್ರರ ಸಂಪರ್ಕ - 82774 14801 (ರಾತ್ರಿ 9 - 10)