ಸಾಗರದಿಂದ ಅರ್ಧ ತಾಸು ದೂರದ ಈ ಸುರಗಿಯ ಊರಿಗೆ ವರ್ಷಕ್ಕೆ 3 - 4 ಲಕ್ಷ ರೂ. ಈ ಕಾಡು ಬೆಳೆಯಿಂದ ಬರುತ್ತದೆ. ಆದರೆ ಇಲ್ಲಿನ ಸುರಗಿಯ ಸುವರ್ಣಕಾಲ ಎಂದೋ ಆಗಿಹೋಗಿದೆ.
- ದೇವೇಂದ್ರ ಬೆಳೆಯೂರು
ಸುಮಾರು ನೂರು ಮನೆಗಳ ಊರು ಸೂರುಗುಪ್ಪೆ. ಸಾಗರ ತಾಲೂಕಿನ ಕಾಗೋಡು ಗ್ರಾಮ ಪಂಚಾಯತಿನಲ್ಲಿದೆ. ಇದು ಸಾಗರ ಪೇಟೆಯಿಂದ 15 ಕಿ.ಮೀ, ಅಂದರೆ ಅರ್ಧ ತಾಸು ದೂರ.
ಕಾಡಿನಲ್ಲಿ ಕೆಲವೆಡೆ ಎರಡು ಅಥವಾ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಜಾತಿ ಮರಗಳ ದಟ್ಟಣೆ ಇರುವುದಿದೆ. ಹೊನ್ನೆ ಸರ, ಜಂಬೆ ಕೊಪ್ಪ, ನಂದಿ ತಳೆ ಮೊದಲಾದ ಊರುಗಳಿಗೆ ಆ ಹೆಸರು ತಂದದ್ದು ಅಲ್ಲಲ್ಲಿ ಸಾಂದ್ರವಾಗಿರುವ ಗಿಡಮರಗಳು. ಅದೇ ರೀತಿ ಈ ಊರು ಸುರಗಿ ಕುಪ್ಪೆಯಾಗಿ, ಕೊನೆಗೆ ಸೂರುಗುಪ್ಪೆಯಾಗಿದೆ.
ಈ ಊರಿನ ಅನೇಕರ ಮನೆಯಂಗಳ, ಹಿತ್ತಲಲ್ಲಿ, ದೇವಾಲಯದ ಪ್ರಾಂಗಣದಲ್ಲಿ, ಶಾಲಾ ಆವರಣದಲ್ಲಿ ಸುರಗಿ ಮರಗಳಿವೆ. ನಾಗರ ಕಲ್ಲುಗಳು ಸುರಗಿ ಮರದ ಕೆಳಗೆ ಪ್ರತಿಷ್ಠ್ಠಾಪನೆಗೊಂಡಿವೆ. ನಲವತ್ತು ಎಕರೆಯ ಈ ಊರಿನ ವಸತಿ ಪ್ರದೇಶದಲ್ಲಿರುವ ಸುರಗಿ ಮರ ಎಂಬತ್ತಕ್ಕೂ ಹೆಚ್ಚು.
ಸಣ್ಣ ಗಿಡಗಳೂ, ನೂರಾರು ವರ್ಷಗಳ ಹಳೆ ಮರಗಳೂ ಇಲ್ಲಿವೆ. ಇವು ಯಾವುವೂ ನೆಟ್ಟು ಬೆಳೆಸಿದವಲ್ಲ. ತಾವಾಗಿಯೇ ಹುಟ್ಟಿ ಬೆಳೆದವು.
225 ವರ್ಷ ಹಿಂದೆ ಫ್ರಾನ್ಸ್ ಪ್ರಜೆ, ಬ್ರಿಟಿಷ್ ಅಧಿಕಾರಿ ಬುಕ್ಯಾನನ್ ಈ ಊರಿನ ಮೂಲಕ ಹಾದು ಹೋಗಿದ್ದರು. ಅವರ ದಿನಚರಿಯಲ್ಲಿ ಸುರಗಿ ಮರದ ಪ್ರಸ್ತಾಪವಿದೆ. ಈ ಊರಿನ ಹಿರಿಯರು ಅವರ ಬಳಿ ಇಲ್ಲಿ ಹಿಂದೆ ಇದ್ದ ಸುರಗಿ ಸಮೃದ್ಧಿಯ ಬಗ್ಗೆ ವಿವರಿಸಿದ್ದರು. ಮನೆ ಕಟ್ಟುವಾಗ, ತೋಟ ಮಾಡುವಾಗ, ಬೇರೆಬೇರೆ ಕೆಲಸಗಳಿಗೆ ಮಣ್ಣು ಅಗೆದು ತೆಗೆಯುವಾಗ ಅನೇಕ ಮರಗಳು ನಾಶವಾಗಿದ್ದುವಂತೆ.
ಒಂದೂವರೆ ದಶಕದಿಂದ ಉದುರಿದ ಸುರಗಿ ಹೂಗಳಿಗೆ ಮಾರುಕಟ್ಟೆ ಸಿಗತೊಡಗಿದೆ. ಹಿಂದೆ ಮರದ ಕೆಳಗೆ ಸ್ವಚ್ಛಗೊಳಿಸಿ ಸಗಣಿ ಸಾರಿಸಿ ಹೂ ಶೇಖರಿಸುತ್ತಿದ್ದರು. ಈಗ ಈ ಕೆಲಸಕ್ಕೆ ಟಾರ್ಪಲಿನ್ / ಸೀರೆಗಳನ್ನು ಬಳಸುತ್ತಾರೆ. ಒಣ ಹೂಗಳನ್ನು ತೂಕದಲ್ಲಿ ಕೊಳ್ಳುವವರು ಮನೆ ಬಾಗಿಲಿಗೇ ಬರುತ್ತಾರೆ.
ಹತ್ತಿರದ ತಾಳಗುಪ್ಪ, ಸಿದ್ಧಾಪುರ ಮುಂತಾದ ಪೇಟೆಗಳ ಅಂಗಡಿಯವರು ಈ ಹೂಗಳನ್ನು ಖರೀದಿಸುತ್ತಾರೆ. ಇವರುಗಳು ಹೇಳುವಂತೆ ಇದು ‘ಪರಿಮಳ ದ್ರವ್ಯ’ ತಯಾರಿಗೆ ಹೋಗುತ್ತದೆ. ಸುರಗಿ ಅರಣ್ಯ ವೃಕ್ಷವಾದ ಕಾರಣ ಇದರ ವ್ಯವಹಾರಗಳಿಗೆ ಅರಣ್ಯ ಕಾನೂನು ಅನ್ವಯವಾಗುತ್ತದೆ. ಹೀಗಾಗಿ ಅಧಿಕೃತವಾಗಿ ವ್ಯವಹಾರ ಮಾಡುವವರು ತುಂಬಾ ಕಡಿಮೆ.
ಇತ್ತೀಚೆಗೆ ಒಣ ಮೊಗ್ಗುಗಳಿಗೆ ಹೆಚ್ಚು ಬೆಲೆ ಸಿಗುತ್ತಿದೆ. ಕೆಲವರು ಮರ ಏರಿ ಮೊಗ್ಗುಗಳನ್ನು ಕೈಯಲ್ಲೇ ಉರುಬಿ (ಎದುರು ಸಿಕ್ಕಿದ್ದನ್ನೆಲ್ಲಾ ಕೀಳುವುದು, ಉರುಂಬುವುದು) ಒಣಗಿಸಿ ಮಾರುತ್ತಾರೆ.
ಸೂರುಗುಪ್ಪೆ ಗ್ರಾಮದ ಮೂವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ಅಥವಾ ಎರಡು ಸುರಗಿ ಮರ ಸಂಪತ್ತಿದೆ. ಇವುಗಳಿಂದ ಇವರ ಕುಟುಂಬಗಳು ತಲಾ ಕನಿಷ್ಠ್ಠ ಮೂರು ಸಾವಿರ, ಗರಿಷ್ಠ ಮೂವತ್ತೈದು ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.
ರೈತ ಕೇಶವ ಒಂದೇ ಮರದಿಂದ 100 ರಿಂದ 200 ಕಿಲೋ ಒಣ ಹೂ ಪಡೆಯುತ್ತಾರೆ. ಇವರು ಬಿದ್ದ ಹೂಗಳನ್ನಷ್ಟೇ ಆಯ್ದು ಮಾರುವ ಕಾರಣ ಆದಾಯ ಕಡಿಮೆ. ವರ್ಷಕ್ಕೆ ರೂ.35,000 ದ ಅಂದಾಜು ಪಡೆಯುತ್ತಿದ್ದಾರೆ. ಗಂಗಾಧರ ಗೌಡರು ಹೋದ ವರ್ಷ ಎರಡು ಮರಗಳಿಂದ 75 ಕಿಲೋ ಒಣ ಮೊಗ್ಗು, 34,000 ರೂ. ವರಮಾನ ಗಳಿಸಿದ್ದಾರೆ. ರಾಮಚಂದ್ರ, ಮಂಜಪ್ಪ ಮುಂತಾದ ರೈತರಿಗೆ ಒಣ ಹೂವು ಮತ್ತು ಮೊಗ್ಗುಗಳಿಂದ 15,000 ರೂ.ಗಳಿಗೂ ಹೆಚ್ಚು ಗಳಿಕೆಯಾಗಿದೆ.
ಸುರಗಿ ಶಿವರಾತ್ರಿಯಿಂದ ಯುಗಾದಿ ವರೆಗೆ (ಮಾರ್ಚ್ ತಿಂಗಳು) ಒಂದು ತಿಂಗಳು ಕಾಲ ಮಾತ್ರ ಹೂ ಬಿಡುತ್ತದೆ. ಐವತ್ತು ವರ್ಷ ಹಿಂದೆ ಒಂದು ತಿಂಗಳಿಡೀ ಪ್ರತಿದಿನ ಅರಳು ಮೊಗ್ಗು ಕೊಯ್ದು ಪೆÇೀಣಿಸಿ, ಮಾಲೆ ಮಾಡಿ ಮಾರುತ್ತಿದ್ದರು. ಈ ಹಾರಗಳನ್ನು ಬತ್ತದ ಹುಲ್ಲಿನ ಮೇಲೆ ಬಿಸಿಲಲ್ಲಿ ಒಣಗಿಸಿದರೆ ತಾಜಾತನ ಉಳಿಯುತ್ತದೆ.
ಒಣ ಹಾರಗಳನ್ನು ಬಯಲು ಸೀಮೆಯಲ್ಲಿ ಹೆಣ್ಣು ಮಕ್ಕಳು ಪೂಜೆ, ಮದುವೆ ಮುಂತಾದ ಸಮಾರಂಭಗಳಲ್ಲಿ ಮುಡಿಯುವುದು ಶೋಕಿಯಾಗಿತ್ತು. ಅಲ್ಲಿಗೆ ಹೋಗಿ ಒಣ ಹಾರ ಮಾರಿ ಮನೆಗೆ ಬೇಕಾದಷ್ಟು ಒಣಮೆಣಸು, ಹುಣಿಸೆ ಹಣ್ಣು ತರುತ್ತಿದ್ದುದನ್ನು ಊರಿನ ಹಿರಿಯರು ನೆನೆಯುತ್ತಾರೆ. ಈಗ ಸುರಗಿ ಕೊಯ್ದು ಹಾರ ಮಾಡುವುದು ಲಾಭದಾಯಕವಲ್ಲ. ಯಾರೂ ಈ ಕೆಲಸ ಮಾಡುತ್ತಿಲ್ಲ.
ಸಿ.ಆರ್. ಚಂದ್ರಶೇಖರ್ ಐದಾರು ವರ್ಷಗಳಿಂದ ಮೊಗ್ಗು ಕೊಯ್ದು ತಾಳಗುಪ್ಪದ ಮಂಡಿಗೆ ಮಾರುತ್ತಿದ್ದಾರೆ. ಕಳೆದ ವರ್ಷ 8 ರಿಂದ 10,000 ರೂ. ಆದಾಯ ಬಂದಿದೆ. ಇಲ್ಲಿರುವ ಅಂದಾಜು 30 ರಿಂದ 40 ಮನೆಯವರಿಗೆ ಒಂದರಿಂದ 4 ರ ವರೆಗೆ ಸುರಗಿ ಮರಗಳಿವೆ. ಬಿದ್ದ ಹೂ ಸಂಗ್ರಹ ಮಾಡುವವರೇ ಹೆಚ್ಚು. ಸೂರುಗುಪ್ಪೆಯ ಎಲ್ಲರ ಆದಾಯ ಒಟ್ಟು ಸೇರಿಸಿದರೆ ಇವರ ಪ್ರಕಾರ ಮೂರರಿಂದ ನಾಲ್ಕು ಲಕ್ಷ ರೂ. ಆಗಬಹುದು.
“ನಾನು ಚಿಕ್ಕವನಿದ್ದಾಗ ಸುರಗಿಯೇ ನಮ್ಮೆಲ್ಲರ ಬದುಕಿನಾಧಾರ ಆಗಿತ್ತು. ಆಗ ದಂಡೆ ಕಟ್ಟಿ ಮಾರುವುದೂ ಇತ್ತು. ಈಗ ಅಡಿಕೆ ಮತ್ತು ಇನ್ನಿತರ ಬೆಳೆ ಬೆಳೆಯುವ ಕಾರಣ ಸುರಗಿಯ ಆಸಕ್ತಿ ಇಳಿದೇಬಿಟ್ಟಿದೆ. ಹಲವು ಮರಗಳನ್ನು ಕಡಿದುಬಿಟ್ಟಿದ್ದಾರೆ” ಎನ್ನುತ್ತಾರೆ 41 ವರ್ಷದ ಈ ಕೃಷಿಕ.