ADD

Back To Free Articles

May-2025

ಊರಲ್ಲೊಬ್ಬನೇ ಡೋರ್ ಡೆಲಿವರಿಗಾರ!

ಪ್ರತಿ ದಿನವೂ ಕೊಯ್ದ ತರಕಾರಿ ಬಲು ಬೇಗ ಮನೆ ಬಾಗಿಲಿಗೆ. ಸಂಜೆ ಹೊತ್ತಿಗೆ ಹರಿದಾಸನ್ ಫೋನ್ ಗುಣುಗುಣಿಸುತ್ತಲೇ ಇರುತ್ತದೆ. ಅದಕ್ಕನುಸಾರ ಮರುದಿನ ಅವರ ಸ್ಕೂಟರಿಗೆ ಅಡ್ಡಾಡುವ ಕೆಲಸ.

ಶ್ರೀ

 
no image
 

ಕೇರಳದ ಕಣ್ಣೂರು ಜಿಲ್ಲೆಯ ಕೃಷಿಕ ಹರಿದಾಸನ್ ಕೊಯೋತ್ ಅವರಿಗೀಗ 61. ಪೂರ್ಣಾವಧಿ ತರಕಾರಿ ಕೃಷಿಕ. ಸ್ವಂತ ಭೂಮಿ 1.10 ಎಕ್ರೆ. ಸ್ಥಳ ಬಾಡಿಗೆಗೆ ಜಾಗ ಪಡೆದು ಹತ್ತಾರು ಬಗೆಯ ತರಕಾರಿ ಬೆಳೆಸುತ್ತಾರೆ.

“ಈ ಬಾರಿಯ ಬೆಳೆ ಹೇಗಾಯಿತು” ಎಂದು ಈಚೆಗೆ ಲೋಕಾಭಿರಾಮದ ಮಾಮೂಲಿ ಪ್ರಶ್ನೆ ಕೇಳಿದ್ದೆ. “ನಾನು ಅಕ್ಟೋಬರ್ ಕೊನೆಗೆ, ಎಲ್ಲರಿಗಿಂತಲೂ ಮೊದಲು ಕೃಷಿ ಆರಂಭಿಸಿದ್ದೆ. ಹಾಗಾಗಿ ಬೆಳೆ ಅಡ್ಡಿಯಿಲ್ಲ. ತಡವಾಗಿ ಕೃಷಿ ಮಾಡಿದವರಿಗೆ ಏರಿದ ಉಷ್ಣತೆಯಿಂದ ಉತ್ಪಾದನೆಗೆ ಹೊಡೆತ ಆಗಿದೆ. ನನ್ನ ಮಾರ್ಕೆಟಿಂಗ್ ರೀತಿ ಪ್ರತ್ಯೇಕ ಇರುವ ಕಾರಣ ಸುಲಭದಲ್ಲಿ ಹೊಡೆತ ಬೀಳುವುದಿಲ್ಲ” ಎಂದರು.

ಉಳಿದವರಲ್ಲಿಲ್ಲದ ಏನೋ ವ್ಯವಸ್ಥೆ ಇವರಲ್ಲಿರಬೇಕು ಎಂದು ಕೆದಕಿದೆ. ಆಗ ಹೊರ ಬಂತು ಸ್ವಾರಸ್ಯ. ಹರಿದಾಸನ್ ತಾನು ಬೆಳೆದದ್ದನ್ನು ಯಾವುದೇ ಮಧ್ಯವರ್ತಿಗೂ ಕೊಡುವುದಿಲ್ಲ. ಪ್ರತಿ ದಿನ ನೇರ ಗ್ರಾಹಕರಿಗೆ ಡೋರ್ ಡೆಲಿವರಿ!

ಈ ಐಡಿಯಾ ಹೊಳೆದದ್ದು ಮೂರು ವರ್ಷ ಹಿಂದೆ. ಇವರಿಗೆ ರಾಜರಸ್ತೆಯ ಬದಿಯಲ್ಲೇ ಮುನಿಸಿಪಾಲಿಟಿ ಕಟ್ಟಿ ಕೊಟ್ಟ ಒಂದು ಅಂಗಡಿ / ಶೆಡ್ ಇದೆ. ಅಲ್ಲಿಗೆ ಒಯ್ದು ಮಾರಾಟ ಮಾಡುತ್ತಿದ್ದಾಗ ನಡುನಡುವೆ “ತಾಜಾ ಹಾಗಲಕಾಯಿ ಇದೆಯಾ? ನನಗಾಗಿ ಇಟ್ಟಿರಿ”, “ಸ್ವಲ್ಪ ಫ್ರೆಶ್ ಹರಿವೆ ಬದಿಯಲ್ಲಿಡಿ” ಇತ್ಯಾದಿ ವಿನಂತಿಗಳು ಬರತೊಡಗಿದುವು. ಒಂದೆರಡು ಬಾರಿ ಸ್ಕೂಟರಿನಲ್ಲಿ ಇವನ್ನು ಒಯ್ದು ಗಿರಾಕಿಯ ಮನೆ ಮುಟ್ಟಿಸಿದರು. ಅವರು ಖುಷ್. ಇವರ ತಲೆಯಲ್ಲಿ ಮಿಂಚು!

ಬರಬರುತ್ತಾ ಶೆಡ್ಡಿನ ಮಾರಾಟ ಕಡಿಮೆ ಆಯಿತು. “ನಾವು ಎಷ್ಟೇ ಫ್ರೆಶ್ ಒಯ್ದು ಇಟ್ಟರೂ ಅಂದಂದು ಮಾರದೆ ಉಳಿದರೆ ಮರುದಿನಕ್ಕೆ ಒಂದಷ್ಟು ಬಾಡಿಯೇ ಬಾಡುತ್ತದೆ. ಇದಕ್ಕೆ ಬದಲು ಮನೆ ತಲುಪಿಸಿದರೆ ಇಕ್ಕಡೆಗೂ ಅನುಕೂಲ” ಎಂಬ ಅರಿವು ಮೂಡಿತು.

ಈಗ ನೋಡಿ, ಪ್ರತಿ ದಿನವೂ ಕೊಯ್ದ ತರಕಾರಿ ಬಲು ಬೇಗ ಮನೆ ಬಾಗಿಲಿಗೆ. ಸಂಜೆ ಹೊತ್ತಿಗೆ ಹರಿದಾಸನ್ ಫೋನ್ ಗುಣುಗುಣಿಸುತ್ತಲೇ ಇರುತ್ತದೆ.

ಅದಕ್ಕನುಸಾರ ಮರುದಿನ ಅವರ ಸ್ಕೂಟರಿಗೆ ಅಡ್ಡಾಡುವ ಕೆಲಸ. ಬೆಂಡೆ, ಅಲಸಂಡೆ, ಹರಿವೆ, ಮುಳ್ಳುಸೌತೆ, ಪಡುವಲ, ಹರಿವೆ, ಹಾಗಲ, ಚೀನಿಕಾಯಿ - ಹೀಗೆ ಎಲ್ಲ ನಾಡ ತರಕಾರಿಗಳನ್ನೂ ಬೆಳೆಸುತ್ತಾರೆ. ಪ್ರತಿದಿನ ಒಂದೆರಡು ಗಂಟೆ ಪಟ್ಟಿ ನೋಡಿ ಪ್ಯಾಕಿಂಗ್, ಡೆಲಿವರಿ ಮೊದಲಾದುವುಗಳಿಗೆ ಬೇಕು. ಅಂದಂದಿನ ಮಾರುಕಟ್ಟೆ ದರದಿಂದ 5 - 10 ರೂ ಜಾಸ್ತಿ ಇವರ ಬೆಲೆ. ಆದರೆ ಇವರದೇ ಆದ ಗಿರಾಕಿಗಳಿದ್ದಾರೆ.

“ಅಂದಾಜು 30 ಕುಟುಂಬ ಇರಬೇಕು. ಸುಮಾರು ಮೂರು ಕಿಲೋಮೀಟರಿಗಿಂತ ಹೆಚ್ಚು ಗಾಡಿ ಓಡಿಸಬೇಕಿಲ್ಲ. ಒಂದು ದಿನ 10 ಮನೆಗಳಿಗಂತೂ ಡೆಲಿವರಿ ಇದ್ದೇ ಇರುತ್ತದೆ” ಎನ್ನುತ್ತಾರೆ.

ಹರಿದಾಸನ್ ಅವರ ಕಡಂಬೇರಿ ಕವಲ ತಳಿಪರಂಬ ತಾಲೂಕಿನಲ್ಲಿದೆ. ರಾಜರಸ್ತೆಯ ಸುತ್ತಲೂ ಧಾರಾಳ ಮನೆಗಳಿವೆ. ತರಕಾರಿ  ಕೃಷಿಕರ ಸಂಖ್ಯೆಯೂ ದೊಡ್ಡದಿದೆ. ಕೇವೀಕೆ ಈ ಭಾಗದಲ್ಲಿ ವಿಶಿಷ್ಟ ಗ್ರೂಪ್ ಫಾರ್ಮಿಂಗ್ - ಅಂದರೆ, ಊರವರೆಲ್ಲಾ ಒಂದೇ ಕಡೆ ಕೃಷಿ ಮಾಡುವುದರಿಂದ ಲಾಭವಿದೆ ಎಂದು ತೋರಿಸಿಕೊಟ್ಟಿದೆ.

ಕಣ್ಣೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಯರಾಜ್ ಅವರ, ಅವರ ಸಂಸ್ಥೆಯ, ಹಾಗೆಯೇ ಕೃಷಿ ಭವನದ ಬೆಂಬಲ, ಒಂದಷ್ಟು ಸವಲತ್ತುಗಳೂ ಸಿಗುತ್ತವೆ.

ಈ ಸಲದ ತರಕಾರಿ ಋತುವಿನಲ್ಲಿ ಒಂದು ಟನ್ನಿಗೂ ಹೆಚ್ಚು ತರಕಾರಿ ಬೆಳೆದಿದ್ದಾರೆ. ಇದರಿಂದ ಸುಮಾರು 65,000 ರೂ. ಆದಾಯ ಬಂದಿದೆ. ಇನ್ನು ಕೊಯ್ಲು ಮಾಡಲು ಉಳಿದಿರುವ ತರಕಾರಿ ಅತ್ಯಲ್ಪ.

“ನಿಮ್ಮ ಯಶಸ್ಸು ನೋಡಿ ಬೇರೆ ಯಾರಾದರೂ ಈ ಡೋರ್ ಡೆಲಿವರಿಯ ಮಾರ್ಗವನ್ನು ಅನುಸರಿಸುತ್ತಿದ್ದಾರೆಯೇ?”, ಹರಿದಾಸನ್ ಅವರನ್ನು ಕೇಳಿದೆ. “ನಮ್ಮೂರಲ್ಲಿ ಇಲ್ಲ. ತರಕಾರಿ ಕೃಷಿ ಮಾಡಲು ಹೇಗೋ, ಈ ಮನೆ ಬಾಗಿಲ ಪೂರೈಕೆಗೂ ತಾಳ್ಮೆ, ಸತತ ಶ್ರಮ, ಶಿಸ್ತು ಬೇಕಲ್ಲ ಸರ್” ಎಂದಷ್ಟೇ ಹೇಳಿ ಅವರು ಸುಮ್ಮನಾದರು.

ಹರಿದಾಸ್ ನಮ್ಮ ಪ್ರಶ್ನೆಗೆ ನೇರ ಉತ್ತರಿಸದೆಯೂ ಪರಿಸ್ಥಿತಿಯ ಅರ್ಥ ಮಾಡಿಸಿಕೊಟ್ಟಿದ್ದರು.

ಹರಿದಾಸನ್ ಅವರ ಊರನ್ನು ಬರೇ ಹಳ್ಳಿ ಎನ್ನುವ ಹಾಗೆಯೂ ಇಲ್ಲ. ನಗರ, ಪೇಟೆಯೂ ಅಲ್ಲ. ಆದರೆ ತುಂಬ ಜನನಿಬಿಡ ಪ್ರದೇಶ. ಹಾಗಾಗಿ ಡೋರ್ ಡೆಲಿವರಿಗೆ ಬೇಕಾದ ಹೆಜ್ಜೆ ಗುರುತು ಕಡಿಮೆ.

ಇಷ್ಟು ನಿಬಿಡ ಪ್ರದೇಶ ಇಲ್ಲದಿದ್ದರೂ ‘ಹರಿ’ಯ ದಾರಿ ಹಿಡಿದೊಡೆ ಗೆಲುವೂ ಹಿಂಬಾಲಿಸಿ ಬರದಿಹುದೇ?